ಕೊಳ್ಳೇಗಾಲ: ಕೊಳ್ಳೇಗಾಲ ತಾಲ್ಲೂಕು ಮತ್ತು ನರಸೀಪುರ ತಾಲೂಕಿನ ಸುತ್ತಮುತ್ತಲಿನ ಜಮೀನುಗಳಿಂದ ಜಾನುವಾರುಗಳ ಮೇವುಗಳನ್ನು ಅಕ್ರಮವಾಗಿ ಸಾಗಾಣೆ ಮಾಡುತ್ತಿರುವ ಬಗ್ಗೆ ಕೊಳ್ಳೇಗಾಲ ತಾಲ್ಲೂಕಿನ ಗ್ರಾಮೀಣ ಭಾಗದ ರೈತರಿಂದ ವ್ಯಾಪಕ ದೂರುಗಳು ಕೇಳಿ ಬರುತ್ತಿದೆ.
ಈಗಾಗಲೇ ಪ್ರಸಕ್ತ ಸಾಲಿನಲ್ಲಿ ಭತ್ತದ ಬೆಳೆ ಕಟಾವಿಗೆ ಬಂದಿದ್ದು, ನರಸೀಪುರ ತಾಲೂಕಿನ ಮೂಗೂರು, ಮಾಡ್ರಳ್ಳಿ, ತಲಕಾಡು ಸುತ್ತಮುತ್ತಲಿನ ಜಮೀನುಗಳಲ್ಲಿ ಭತ್ತ ಕಟಾವು ಮಾಡಲಾಗುತ್ತಿದೆ.
ಭತ್ತ ಕಟಾವು ಆದ ನಂತರ ಜಾನುವಾರುಗಳ ಭತ್ತದ ಹುಲ್ಲನ್ನು ತಮಿಳು ನಾಡು ಭಾಗದ ದಲ್ಲಾಳಿಗಳು ಬಂದು ಹುಲ್ಲನ್ನು ರೈತರಿಂದ ಖರೀದಿಸಿ ಅಕ್ರಮವಾಗಿ ತಮಿಳುನಾಡಿನ ಕಡೆಗೆ ಸಾಗಿಸಲಾಗುತ್ತಿದೆ.
ದಲ್ಲಾಳಿಗಳ ಮದ್ಯವಸ್ತಿಕೆಯಿಂದ ಬಹುತೇಕ ಭತ್ತ ಬೆಳೆದ ರೈತರು ತಮ್ಮ ಹುಲ್ಲುಗಳನ್ನು ತಮಿಳುನಾಡು ಭಾಗದವರಿಗೆ ಮಾರಾಟ ಮಾಡುತ್ತಿದ್ದಾರೆ. ಇದರಿಂದ ಸ್ಥಳಿಯ ಇತರೆ ರೈತರಿಗೆ ಹಸುಗಳಿಗೆ ಮೇವು ಖರೀದಿಸಲು ಸಾಧ್ಯವಾಗುತ್ತಿಲ್ಲ.
ಇತ್ತೀಚೆಗೆ ಕಳೆದೊಂದು ವಾರದಿಂದ ಕೊಳ್ಳೇಗಾಲ ತಾಲ್ಲೂಕಿನ ಮುಳ್ಳೂರು ಮತ್ತು ಸಮೀಪದ ಗ್ರಾಮಗಳಿಂದಲೂ ಭತ್ತದ ಹುಲ್ಲನ್ನು ತಮಿಳುನಾಡಿನ ಕಡೆಯ ದಲ್ಲಾಳಿಗಳು ಖರೀದಿ ಮಾಡುತ್ತಿರುವುದು ಕಂಡುಬರುತ್ತಿದೆ.
ಇದರಿಂದಾಗಿ ಹಸುಗಳನ್ನು ಸಾಕುತ್ತಿರುವ ಇತರ ರೈತರಿಗೆ ಭತ್ತದ ಹುಲ್ಲುಗಳು ಸಿಗುತ್ತಿಲ್ಲ.ಸಮೀಪದ ಕರ್ನಾಟಕದ ಗಡಿಭಾಗದಿಂದಲೇ ಹುಲ್ಲು ತುಂಬಿದ ಲಾರಿಗಳು ಚೆಕ್ ಪೋಸ್ಟ್ ಮೂಲಕವೇ ಹೋಗುತ್ತಿದ್ದರೂ ಸಹ, ಪೋಲಿಸ್ ಮತ್ತು ಕಂದಾಯ ಇಲಾಖೆಯ ಅಧಿಕಾರಿಗಳು ಮೌನವಹಿಸಿರುವುದು ಹಲವು ಪ್ರಶ್ನೆಗಳನ್ನು ಹುಟ್ಡುಹಾಕಿದೆ.
ಕೊಳ್ಳೇಗಾಲ ತಾಲ್ಲೂಕು ಆಡಳಿತ, ಹನೂರು ತಾಲ್ಲೂಕು ಆಡಳಿತ ಮತ್ತು ಚಾಮರಾಜನಗರ ಜಿಲ್ಲಾ ಆಡಳಿತ ತಕ್ಷಣ ಎಚ್ಚೆತ್ತು ಕೊಂಡು ತಮಿಳುನಾಡಿನ ಕಡೆಗೆ ಅಕ್ರಮವಾಗಿ ಸಾಗಾಣೆ ಆಗುತ್ತಿರುವ ಹಸುವಿನ ಮೇವನ್ನು ತಡೆಹಿಡಿಯ ಬೇಕೆಂದು ಹಲವಾರು ರೈತರು ಒತ್ತಾಯಿಸಿದ್ದಾರೆ.
- ನಿಂಪುವಾರ್ತೆ
ಈ ಸುದ್ದಿಯ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ನಮ್ಮ ವೆಬ್ಸೈಟ್ ಅನ್ನು ನಿಯಮಿತವಾಗಿ ಭೇಟಿ ನೀಡಿ. ಈ ಬೆಳವಣಿಗೆಯ ಬಗ್ಗೆ ಹೆಚ್ಚಿನ ವಿವರಗಳು ಬಂದಂತೆ ನಾವು ನಿಮ್ಮನ್ನು ಅಪ್ಡೇಟ್ ಮಾಡುತ್ತೇವೆ. ಕರ್ನಾಟಕದ ಎಲ್ಲಾ ಇತ್ತೀಚಿನ ಸುದ್ದಿಗಳಿಗಾಗಿ ರಾ.ಪವರ್ 28 ಅನ್ನು ಅನುಸರಿಸಿ.