ಬಂಧು
ಭಾಸ್ಕರನಿಗೂ ಮುಂಚೆ ತಾನೇ ಎದ್ದುಬಿಡುವ
ಎತ್ತುಗಳನ್ನೂ ಎಬ್ಬಿಸಿ ಉಳಲಿಕ್ಕೋಗುವ
ಬಿತ್ತು ಬೆಳೆದು ಹೊಟ್ಟೆಗಿಷ್ಟು ಕೂಳು ನೀಡುವ
ಹಾಲು ಮೊಸರು ತುಪ್ಪಗಳನ್ನೂ ಕೊಡುವ
ಈ ಹೆಮ್ಮೆಯ ರೈತನಿಗೊಮ್ಮೆ ನಮಿಸಿಬಿಡುವ
ಹೊತ್ತು ಗೊತ್ತು ಯಾವದೂ ಲೆಕ್ಕಕ್ಕಿಲ್ಲ
ಕರೆದಾಗೆಲ್ಲ ಬರದೆ ಇರುವುದೇ ಇಲ್ಲಾ
ಭಯದ ನೆರಳ ದೂರ ಸರಿಸಿ
ತಾನಿರುವೆನೆಂಬ ನಂಬಿಗೆಯಿರಿಸಿ
ಕಾಯುತ್ತಲೇ ಇರುವ ಪೊಲೀಸ್ ಸಾಹೇಬ
ಇಲ್ಲಿ ಇಷ್ಟು ಚಳಿಯನ್ನೇ ಸಹಿಸಲಾಗುತ್ತಿಲ್ಲ
ಗಡಿಯಲ್ಲಿ ಹೇಗಿರುವರೊ ದೇವರೇ ಬಲ್ಲ
ನಾಡಿನ ಜನರ ಕ್ಷೇಮ ಸೌಖ್ಯವ ನೆನೆದು
ಹೊರಗಿನ ಶತ್ರುಗಳು ಬರದಂತೆ ತಡೆದು
ನಾಡನ್ನು ರಕ್ಷಿಸುತ್ತಿರುವ ರಕ್ಷಕ ನಮ್ಮ ಸೈನಿಕ
ತನ್ನವರಲ್ಲದವರ ಜೊತೆಯೇ ಇದ್ದುಕೊಂಡು
ತನ್ನದಲ್ಲದ ಹಣವನ್ನು ಕಾದಿಟ್ಟುಕೊಂಡು
ಎತ್ತಲಿಂದೆತ್ತಲೊ ಮತ್ತೆತ್ತಲೋ ಕರೆದೊಯ್ಯುವ
ಇಳಿಸಿ ಹತ್ತಿಸಿ ದಬ್ಬುತ್ತಲೇ ಸಾಗಿಸಿಬಿಡುವ
ಸಂಚಾರ ಸಾರಥಿಯೊಡನಿರುವ ನಿರ್ವಾಹಕ
ಬೆಳಗಿನ ಜಾವವೇ ನಗುತ್ತಲೇ ಬರುವ
ಚೆಂದದೊಂದು ಹಾಡು ಹಾಕಿ ಎಬ್ಬಿಸಿಬಿಡುವ
ನಾವೇ ನೋಡಲಾಗದೆ ಆಚೆಗಿಟ್ಟ ಕಸವನು
ಕೂಗಿಕರೆದು ಪಡೆದು ಹಿಡಿದು ನಡೆದುಬಿಡುವ
ಸ್ವಚ್ಛತೆಯ ರೂವಾರಿ ತಾನೆಂದು ಸಾರಿದ ಕಸದವ
ನಮಗಾಗಿ ಅವರಿಗಾಗಿ ನಿಯಮಗಳ ಪಾಲಿಸುವ
ಜೀವಬಂಧುಗಳಿಗೆ ಭಾವತುಂಬಿ ನಮಿಸಿಬಿಡುವ
✍🏻ರಶ್ಮಿ ಕೆ. ವಿಶ್ವನಾಥ್
ಈ ಸುದ್ದಿಯ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ನಮ್ಮ ವೆಬ್ಸೈಟ್ ಅನ್ನು ನಿಯಮಿತವಾಗಿ ಭೇಟಿ ನೀಡಿ. ಈ ಬೆಳವಣಿಗೆಯ ಬಗ್ಗೆ ಹೆಚ್ಚಿನ ವಿವರಗಳು ಬಂದಂತೆ ನಾವು ನಿಮ್ಮನ್ನು ಅಪ್ಡೇಟ್ ಮಾಡುತ್ತೇವೆ. ಕರ್ನಾಟಕದ ಎಲ್ಲಾ ಇತ್ತೀಚಿನ ಸುದ್ದಿಗಳಿಗಾಗಿ ರಾ.ಪವರ್ 28 ಅನ್ನು ಅನುಸರಿಸಿ.